Posts

ಮಧ್ಯಂತರ

ನಾನು ಪರಮಸುಖಿ ಆದರೆ ಸಂತೋಷದಿಂದ ಅಳೆಯದಿರಿ ನಾನು ಸಿರಿವಂತೆ ಆದರೆ ಸ್ಥಾನದಿಂದ ಅಳೆಯದಿರಿ ನಾನು ಬಲ್ಲವಳು ಆದರೆ ಸಾಧನೆಯಿಂದ ಅಳೆಯದಿರಿ ನಾನು ದಿಟ್ಟೆ ಆದರೆ ಧೈರ್ಯದಿಂದ ಅಳೆಯದಿರಿ ನಾನು ಗುಣವಂತೆ ಆದರೆ ಅಂತಃಶಕ್ತಿಯಿಂದ ಎಂದೆಂದೂ ಅಳೆಯದಿರಿ

ಆದರೂ...

ನೆನಪುಗಳೇ ಅದ್ಹೇಗೆ ಒಂದೊಂದಾಗಿ ಸೇರುತ್ತ ಹೋಗುವಿರಿ? ಜೀವದಲ್ಲೂ ಇರುವಿರಿ ಭಾವದಲ್ಲೂ ಇರುವಿರಿ  ರಾಗದಲ್ಲೂ ಇರುವಿರಿ ತಾಣದಲ್ಲೂ ಇರುವಿರಿ ಪ್ರತಿಬಾರಿ ಆಗಮಿಸಿ ಮಧುರವಾಗಿ ಇರಿಯುವಿರಿ!!! ಆದರೂ... ಮರೆಯಬಯಸುವೆ ನಾ ಕಳೆದುಹೋದ  ದಿನಗಳಲ್ಲಿ ಕಳೆದುಹೋದುದನ್ನ! ಹೊದೆಯಬಯಸುವೆ ನಿರ್ಲಿಪ್ತವಾಗಿ  ಕಟುವಾಸ್ತವದ ಕಂಬಳಿಯನ್ನ  ಆದರೂ.... ಸೆರಗ ಚಾಚಿರುವೆ ಆಸೆಯಿಂದ ನಿಮ್ಮ  ಜನ್ಮದಿನಗಳನ್ನು ಬಾಚಿ ತುಂಬಿಸಲು  ತಿಳಿದಿದ್ದರೂ ಆ ಮಡಿಲು ಎಂದೆಂದಿಗೂ  ತುಂಬಲಾರದೆಂದು!!  ಆದರೂ.. ಸಹಿಸೆನು ಈ ನೆನಪುಗಳ ಇರಿತ ಆದರೂ  ಬಿಡೆನು ಎಂದಿಗೂ ನಿಮ್ಮನ್ನು  ಮೆಲುಕುವ ಸವಿಯ!!  ಇದೆಂಥ ಹಿಂಸೆ ಇದೆಂಥ ಹುಚ್ಚು!? ಮರೆವೇ ಇಡಿಯಾಗಿ ಆವರಿಸಿಬಿಡಲಾರೆಯಾ ನನ್ನ?!!

Super woman!!

ಆಫೀಸಿನಲ್ಲಿ  ಎಲ್ಲರಿಂದ ಸಲಾಂ  ಹೊಡೆಸಿಕೊಳ್ಳುವ ಧೀರ ವನಿತೆ ಮನೆಯಲ್ಲಿ  ಕೆಲಸದಾಕೆಗೆ ಸಲಾಂ ಎಂದಳು!!!!

ವಿರೋಧಾಭಾಸ

ಸಂಪ್ರದಾಯಸ್ಥ  ಹಿರಿಯರು ಹೇಳಿದರು ನನ್ನ ಜಾತಿಯ ಬಿಟ್ಟು ಹೊರಗಿನವರಲ್ಲಿ  ತೊಟ್ಟು ನೀರು ಕುಡಿಯುವುದು ಅಸಂಭವ! ಜೀವ ಹೋಗುವ ಸಂದರ್ಭದಲ್ಲಿ ಹೇಳಿದರು  ವೈದ್ಯರ ಜಾತಿ ಯಾವುದಾದರೇನು  ವೈದ್ಯೋ ದೇವೋ ಭವ!!!!

ಸಧ್ಯದ ದರದು.

            ಜೀವನದ  ಪ್ರತಿಯೊಂದು ಘಳಿಗೆಯೂ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಕಾಲದ ಗಣನೆಯಲ್ಲಿ ವರ್ತಮಾನ ಕಾಲವೆಂಬುದೆ ಇಲ್ಲ. ಭೂತ ಮತ್ತು  ಭವಿಷ್ಯದ  ಅತಿ ತೆಳ್ಳನೆಯ ಕೂದಲು ಗಾತ್ರದ ಎಳೆ ಇದು . ಆದರೆ ನಾವು ಯಾವಾಗಲೂ ಭೂತ ಭವಿಷ್ಯ ಗಳ  ಲೋಕದಲ್ಲೇ  ವಿಹರಿಸುತ್ತ  ಇರುತ್ತೇವೆ.ಅತಿ  ಪ್ರಮುಖವಾದ   ವರ್ತಮಾನ  ವನ್ನು ಯೋಚಿಸಲು ಚಿಂತಿಸಲೂ  ನಮಗ ವೇಳೆ ಇಲ್ಲ. ಈ ವರ್ತಮಾನ ವನ್ನು ವಿಸ್ತಾರ ಗೊಳಿಸುವ ಆಲೋಚನಯೇ ನಮಗಿಲ್ಲ. ಆದರೆ ಈ  ಜೀವನದ ವ್ರಮುಖ ಸಂಗತಿ  ಯಲ್ಲೇ ನಮ್ಮ ಸುಖ ಶಾಂತಿ ಅಡಗಿರುತ್ತದೆ .ಇಂದು ಇಂದಿಗೆ ನಿನ್ನೆ ನಿನ್ನೆಗೆ ಇರಲಿ ನಾಳೆಯು ನಾಳೆಗೆ ಎಂಬ ಸೂತ್ರವನ್ನು  ಶೀಘ್ರ ವಾಗಿ ಅಳವಡಿಸಿಕೊಳ್ಳುವ ಅಗತ್ಯತೆ ಈಗ ನಮ್ಮ ಮುಂದಿದೆ.ನನ್ನ ದೃಷ್ಟಿ ಎಲ್ಲಿಯ ವರೆಗೂ ಹಾಯು ತ್ತದೋ ಅಲ್ಲಿಯ ವರೆಗಿನ ನೋಟ ನನ್ನದು ,ದೂರದ ಮಂಜು ಮುಸುಕಿದ ದಿಗಂತ ವಲ್ಲ.ಸಧ್ಯದ ಕಣ್ಣೆದುರಿಗಿನ ಹಿಡಿದ ಕೆಲಸ ಮುಗಿಸುವ ಹೊರೆ ಇದ್ದಾಗ ಅದರ ಮುಂದಿನ ಆಲೋಚನೆ ನಮಗೇಕೆ ,ಅಲ್ಲವೇ?                                 ...

ಎದೆಯೊಳಗಿನ ಹಣತೆ

ಎತ್ತಣೆತ್ತಣವೂ ಸುಡುವ ಬಿಸಿಲ ಬೇಗೆಗೆ ಉರಿಯುತ್ತಿರುವ ನೆತ್ತಿಯ ಎತ್ತಿ ಕಣ್ಣು ಕೀಲಿಸಿದರೂ ತೋರಲಿಲ್ಲವೆಲ್ಲಿಯೂ ತಂಪೆರೆವ ತಂಪಲು. ಬೀಸುತ ಎದುರಾಗುವ ಬಿರುಗಾಳಿಗೆ ಎದೆಯೊಡ್ಡಿ ತೂರಿ ಬರುತ್ತಿರುವ ಧೂಳಿಗೆ ಕಣ್ಣೊಡ್ಡಿ ಕಾಯುತಿದ್ದರೂ ಸೋಕಲಿಲ್ಲವೆಂದೂ ಮುದ ನೀಡುವ ತಂಗಾಳಿ. ಒಮ್ಮೊಮ್ಮೆ ಒಂಟಿಯಾಗಿ ಮತ್ತೊಮ್ಮೆ ಜಂಟಿಯಾಗಿ ಎಡುವುತೇಳುತ ಸಾಗುತಿದ್ದರೂ ಕಾಣಲಿಲ್ಲವೆಂದೂ ತೀರದ ದೂರದ ಕೊನೆ. ಬರಿಗಾಲ ತುಂಬ ಮುಳ್ಳುಗಳು ಕೊರೆದ ಚಿತ್ತಾರ ಏರಿದಷ್ಟೂ ತಲುಪದ  ಗಿರಿಶಿಖರ  ಕರಿಮೋಡದ ಸುತ್ತ ಕಂಡೂ ಕಾಣದ ಬೆಳ್ಳಿಯ ಆವರಣ ಮೈ ಬಣ್ಣ ಮಾಸಿದರೂ, ನಾಲಗೆ ಪಸೆ ಆರಿದರೂ,ತಲೆಗೆದರಿ ಹರಡಿಡರೂ, ಕಣ್ಣುಗಳು ಕೆಂಪೇರಿದರೂ, ಆರಲಿಲ್ಲವೆಂದೂ ಎದೆಯೊಳಗಿನ ಹಣತೆ.

ಸಂಗಾತಿ

Image
ಮನಸಿನ ಪರದೆಯಲಿ ಯಾರೂ ಇರದಾಗ ಬಹುಮೆಲ್ಲನೆ ನಡೆದು ಬಂದು ಎಂದೂ ಅಳಿಸಲಾಗದಂಥ ಹೆಜ್ಜೆಗುರುತು ಮೂಡಿಸಿ ಬಿಟ್ಟೆ. ಭದ್ರತೆಯೆಂಬ ಸಿಂಹಾಸನದಲಿ ಭದ್ರವಾಗಿ ಕೂರಿಸಿ ಸುತ್ತಲೂ ಕನಸುಗಳಿಂದ ಹೆಣೆದ ಸುಭದ್ರವಾದ ಕೋಟೆ ಕಟ್ಟಿದೆ ನನ್ನಯ ಒಂದೊಂದು ಕಣ್ಣೀರಿನ ಹನಿಯೂ ಸೋಲೆಂದು ಭಾವಿಸಿ ಲೆಕ್ಕ ತಪ್ಪದಂತೆ ಹೆಕ್ಕಿ ಬೊಗಸೆಯಲಿಟ್ಟುಕೊಂಡು ನಿರಂತರ ಅದರೆದುರು ಸೆಣಸುತ್ತಲಿರುವೆ ಭರವಸೆ ಕಳೆದುಕೊಂಡು ದಿಕ್ಕು ತಪ್ಪಿ ದೈನ್ಯದಲಿ ನಿಂತಾಗ ಕೈ ತೋಳಿನಾಸರೆ ನೀಡಿ ಎದೆಗಾನಿಸಿ ನೂರಾನೆ ಬಲ ತುಂಬುವೆ ಸಂತಸದ ಕ್ಷಣಗಳಲಿ ನಾ ನಗುವ ಪರಿ ಕಂಡು ಗೆದ್ದ ಭಾವ ತುಂಬಿಕೊಂಡು ಮಂದಹಾಸ ಬೀರುತ ಸಮಾಧಾನದ ನಿಟ್ಟುಸಿರ ಬಿಡುವೆ ಸದಾ ಹಿಂಬಾಲಿಸುವ ನಿನ್ನ ಕಣ್ಣುಗಳಲ್ಲಿ ಯಾವ ಯಾವ ಅರ್ಥ ಹುಡುಕಲಿ? ಆರಾಧನೆಯೇ ಪ್ರೀತಿಯೇ ಕಾಳಜಿಯೇ ಒಡೆತನವೇ ಅಥವಾ ಎಲ್ಲವೂ ಬೆರೆತ ಅಚ್ಚ ಶ್ವೇತವರ್ಣದ ಕಾಂತಿಯೇ ? ಇದಕೂ ಮೀರಿದನು ಬಯಸಿ ನಾ ಖಂಡಿತಾ ಸ್ವಾರ್ಥಿಯಾಗಲಾರೆ